ಗಣರಾಜ್ಯೋತ್ಸವ ದಿನದಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವಿಟ್ಟರೇ ಧ್ವಜಾರೋಹಣ ಮಾಡುವುದಿಲ್ಲ ಎಂದು ಉದ್ಧಟತನ ಹೇಳಿಕರ ನೀಡಿದ್ದ, ರಾಯಚೂರು ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತ ಬಿ.ಆರ್.ಅಂಬೇಡ್ಕರ್ ಸೈನ್ಯ ವತಿಯಿಂದ ನಗರದ ತಹಶಿಲ್ದಾರರ ಕಚೇರಿ ಆವರಣದ ಬಳಿ ಆಗ್ರಹಿಸಲಾಯಿತು.
ತಹಶಿಲ್ದಾರರ ಮೂಲಕ ರಾಜ್ಯ ಸರ್ಕಾರದ ಮನವಿ ಸಲ್ಲಿಸಿ ಮಾತನಾಡಿದ ಸೈನ್ಯದ ಪ್ರಮುಖರು, ಮಲ್ಲಿಕಾರ್ಜುನಗೌಡ ತಮ್ಮ ವೃತ್ತಿಗೆ ಅವಮಾನ ಮಾಡಿದರಲ್ಲದೇ ಇಡೀ ದಲಿತ ಸಮುದಾಯಕ್ಕೆ ನೋವುಂಟು ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಕೃತ್ಯದಿಂದಾಗಿ ನ್ಯಾಯಾಂಗ ಇಲಾಖೆಗೆ ಕಪ್ಪು ಚುಕ್ಕಿ ಎಂಬಂತಾಗಿದೆ ಹಾಗಾಗಿ ಈ ನ್ಯಾಯಾಧೀಶರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ಅವರನ್ನು ಸೇವೆಯಿಂದ ಕೂಡಲೇ ವಜಾಗೊಳಿಸಬೇಕೆಂದು ಒತ್ತಾಯಿಸಲಾಯಿತು.
ಪ್ರತಿಭಟನಾ ಸಂದರ್ಭದಲ್ಲಿ ಅಶೋಕ ಚಲವಾದಿ, ಪರಶುರಾಮ ಮುದಗಲ್, ಹನುಮಂತ ಪವಾಡಿ, ರಾಹುಲ್ ಭಂಡಾರಿ, ಮಂಜುನಾಥ ಬದಾಮಿ, ಸುರೇಶ ಅಸೂಟಿ ಸೇರಿದಂತೆ ಉಪಸ್ಥಿತರಿದ್ದರು.