ಬಿಗ್ ಬಾಸ್ (Bigg Boss Kannada) ರಿಯಾಲಿಟಿ ಶೋ ಮೂಲಕ ಕನ್ನಡ ಅಭಿಮಾನಿಗಳ ಹೃದಯ ಗೆದ್ದಿರುವ ನಟಿ ದಿವ್ಯಾ ಉರುಡುಗ ಇದೀಗ ಗುಡ್ ನ್ಯೂಸ್ ಎನ್ನುತ್ತಾ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ರೇಷ್ಮೆ ಸೀರೆ, ಮಲ್ಲಿಗೆ ಹೂ ಮುಡಿದು ಮದುಮಗಳ ಹಾಗೆ ಕಂಗೊಳಿಸುತ್ತಾ ದಿವ್ಯಾ ಸದ್ಯದಲ್ಲೇ ಅನೌನ್ಸ್ ಮಾಡುತ್ತೀವಿ ಎನ್ನುವ ವಿಚಾರ ಬಹಿರಂಗಪಡಿಸಿದ್ದಾರೆ.
ಅಂದಹಾಗೆ ದಿವ್ಯಾ ಉರುಡುಗ ಅಂದಕ್ಷಣ ಅರವಿಂದ್ ಕೆಪಿ ಹೆಸರು ಕೂಡ ಪಕ್ಕದಲ್ಲೇ ತಗಲಾಕೊಂಡಿರುತ್ತೆ. ಬೈಕ್ ರೇಸರ್ ಅರವಿಂದ್ ಕೆಪಿ ಕೂಡ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರು. ದಿವ್ಯಾ ಮತ್ತು ಅರವಿಂದ್ ಮೊದಲ ಬಾರಿಗೆ ಭೇಟಿಯಾಗಿದ್ದು, ಇದೇ ಬಿಗ್ ಬಾಸ್ ಶೋನಲ್ಲಿ. ದೊಡ್ಮನೆಯಲ್ಲಿ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದ ಈ ಜೋಡಿ ಶೋ ಮುಗಿದ ಬಳಿಕವು ಅಷ್ಟೇ ಕ್ಲೋಸ್ ಆಗಿ ಇದ್ದಾರೆ. ಸದಾ ಜೊತೆಯಲ್ಲೇ ಕಾಣಿಸಿಕೊಳ್ಳುವ ಈ ಜೋಡಿ ಇದೀಗ ಸಿಹಿ ಸುದ್ದಿ ಎಂದು ಸರ್ಪ್ರೈಸ್ ನೀಡಲು ಮುಂದಾಗಿದೆ.
ದಿವ್ಯಾ- ಅರವಿಂದ್ (Aravind Kp) ಸದ್ಯದಲ್ಲೇ ಮದುವೆಯಾಗುತ್ತಾರೆ ಎನ್ನುವ ಮಾತು ಅನೇಕ ದಿನಗಳಿಂದ ಕೇಳಿ ಬರುತ್ತಿದೆ. ಈ ನಡುವೆ ರಿಲೀಸ್ ಆಗಿರುವ ವಿಡಿಯೋ ನೋಡಿದ್ರೆ ಇಬ್ಬರೂ ಮದುವೆಗೆ ರೆಡಿಯಾಗಿದ್ದು, ಸದ್ಯದಲ್ಲೇ ಮದುವೆ ದಿನಾಂಕ ಬಹಿರಂಗ ಪಡಿಸಲಿದ್ದಾರೆ ಎನ್ನುವ ಅನುಮಾನ ಮೂಡಿಸಿದೆ.
ಫೋಟೋಶೂಟ್ಗೆ ರೆಡಿಯಾಗುತ್ತಿರುವ ದಿವ್ಯಾ ಅವರನ್ನು ಏನ್ ಸಮಚಾರ ಮೇಡಮ್, ಯಾವಾಗ ಎಂದು ಒಬ್ಬರು ಪ್ರಶ್ನೆ ಮಾಡುತ್ತಾರೆ. ಆದರೆ ದಿವ್ಯಾ ಸಾಮಾಚಾರ ಏನು ಇಲ್ಲ ಎನ್ನುತ್ತಾ ಹೊರಡುತ್ತಾರೆ. ಆದರೆ ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ರೆಡಿಯಾಗುತ್ತಿದೆ ಎಂದು ಮನಸ್ಸಿನಲ್ಲೇ ಹೇಳಿಕೊಳ್ಳುತ್ತಾ ಖುಷಿ ಪಡುತ್ತಾ ಫೋಟೋಶೂಟ್ಗೆ ತಯಾರಾಗುತ್ತಾರೆ.
ಅಂದಹಾಗೆ ದಿವ್ಯಾ (Divya Uruduga) ಸದ್ಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಬಿಗ್ ಬಾಸ್ ಬಳಿಕ ‘ಅರ್ದಂಬರ್ಧ ಪ್ರೇಮ ಕಥೆ’ ಸಿನಮಾದಲ್ಲಿ ನಟಿಸಿದ್ದಾರೆ. ವಿಶೇಷ ಎಂದರೆ ಆ ಸಿನಿಮಾದಲ್ಲಿ ಅರವಿಂದ್ ಕೆಪಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಅರವಿಂದ್ (Aravind Kp) ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಬಳಿಕ ದಿವ್ಯಾ- ಅರವಿಂದ್ ಒಟ್ಟಿಗೆ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಈ ನಡುವೆ ಗುಡ್ ನ್ಯೂಸ್ ನೀಡಲು ಸಜ್ಜಾಗಿರುವುದು ಅಭಿಮಾನಿಗಳಿಗೆ ಖುಷಿಯ ಜೊತೆಗೆ ಕುತೂಹಲ ಕೂಡ ಹೆಚ್ಚಾಗಿದೆ.