ಕನಕದಾಸ ಸಾಹಿತ್ಯದ ಮೂಲಕ ಜಾತಿ, ಮತ, ಬೇದ ಭಾವ, ಸಮಾಜದಲ್ಲಿರುವ ಅನಿಷ್ಟ ಪದ್ಧತಿಗಳನ್ನು, ಹೋಗಲಾಡಿಸಲು ಸಂತ ಶ್ರೀ ಭಕ್ತ ಕನಕದಾಸರು ಶ್ರಮಿಸಿದ್ದಾರೆ. ಅವರು ಮೂಢನಂಬಿಕೆ ನಿರ್ಮೂಲನೆ ಕುರಿತು ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಿ, ಸಾಮಾಜಿದಲ್ಲಿ ಸಮಾನತೆಯ ಸಂದೇಶ ಸಾರಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಗುರುವಾರ ರಂದು ಏರ್ಪಡಿಸಲಾಗಿದ್ದ ಶ್ರೀ ಭಕ್ತ ಕನಕದಾಸ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನಕದಾಸರ ಕೃತಿ, ಸಾಹಿತ್ಯ, ತತ್ವ, ಸಿದ್ಧಾಂತ, ಅಳವಡಿಸಿಕೊಂಡು ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆದರೆ ಸಮಾಜದಲ್ಲಿ ಎಲ್ಲರೂ ಆದರ್ಶ ಜೀವನ ನಡೆಸಲು ಸಾಧ್ಯವಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಕನಕದಾಸರು ಕೇವಲ ಒಂದೇ ಸಮುದಾಯಕ್ಕೆ ಸೇರಿರದೆ ನಾಡಿನ ಸಮಸ್ತ ಜನತೆಯನ್ನು ಕೃತಿ, ಸಾಹಿತ್ಯ, ಕೀರ್ತನೆಗಳನ್ನು ಆಡುಭಾಷೆಯಲ್ಲಿ ತಿಳಿಸುವ ಮೂಲಕ ಜಾಗೃತಗೊಳಿಸಿ ಸಮಾನತೆಯನ್ನು ಸಾರಿದ ದಾರ್ಶನಿಕ ಕವಿ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷರಾದ ಲಕ್ಷ್ಮಣರಾವ್ ಚಿಂಗಳೆ ಅವರು ಹೇಳಿದರು.
ಮನುಷ್ಯ ಶಿಕ್ಷಣ, ನೀತಿ ಸಂಸ್ಕಾರ, ಉತ್ತಮ ಜ್ಞಾನ ಪಡೆಯದೆ ಸಮಾಜವನ್ನು ತಿದ್ದಿ, ಅಭಿವೃದ್ಧಿಗೊಳಿಸಲಾರ ಆದರಿಂದ ಎಲ್ಲರೂ ಶಿಕ್ಷಣ ಪಡೆದು ಸಮಾಜಕ್ಕೆ ತಮ್ಮದೇಯಾದ ಕೊಡೆಗನ್ನು ನೀಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಬೆಳಗಾವಿ ಆರ್.ಪಿ.ಡಿ. ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಎಚ್. ಬಿ. ಕೋಲ್ಕಾರ ಅವರು ಕನಕದಾಸರು ಸಂತ ಕವಿಯಾಗಿ, ದಾರ್ಶನಿಕರಾಗಿ, ಸಮಾಜದ ಚಿಂತಕರಾಗಿ, ದಾಸರಾಗಿ, ಹರಿದಾಸರಾಗಿ, ಹೀಗೇ ಸಮಾಜದಲ್ಲಿ ಸಾರ್ಥಕ ಬದುಕನ್ನು ಬದುಕುವುದರ ಜೊತೆಗೆ ಸಮಾಜವನ್ನು ಸಾರ್ಥಕ ಬದುಕಿನ ಜೊತೆಗೆ ಮುನ್ನುಡಿಸುವ ಬೀಜವನ್ನು ಬಿತ್ತಿದವರು ಶ್ರೀ ಭಕ್ತ ಕನಕದಾಸರು ಎಂದು ಹೇಳಿದರು.
ಶ್ರೀ ಭಕ್ತ ಕನಕದಾಸ ಜಯಂತಿ ನಿಮಿತ್ಯ ಅವರ ಭಾವಚಿತ್ರದ ಭವ್ಯ ಮೆರವಣಿಗೆಗೆ ಬೆಳಗಾವಿ ಉತ್ತರ ವಿಧಾನ ಸಭಾ ಕ್ಷೇತ್ರ ಶಾಸಕ ಆಸೀಪ್ (ರಾಜು) ಸೇಠ್ ಅವರು ಚಾಲನೆ ನೀಡಿದರು. ಕನಕದಾಸ ವೃತ್ತದಿಂದ ಆರಂಭಗೊಂಡ ಶ್ರೀ ಭಕ್ತ ಕನಕದಾಸರ ಭಾವ ಚಿತ್ರದ ಭವ್ಯ ಮೆರವಣಿಗೆ ಅಶೋಕ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತದ ಮಾರ್ಗವಾಗಿ ನಗರದ ಕುಮಾರ್ ಗಂಧರ್ವ ಕಲಾಮಂದಿರವನ್ನು ತಲುಪಿತು.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಹರ್ಷಲ್ ಭೋಯರ್, ಬೆಳಗಾವಿ ಡಿಸಿಪಿ ಸ್ನೇಹಾ ಪಿವಿ, ಮಹಾನಗರ ಪಾಲಿಕೆ ಆಯುಕ್ತರಾದ ಅಶೋಕ ದುಡಗುಂಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕರಾದ ವಿದ್ಯಾವತಿ ಭಜಂತ್ರಿ,ಮಹಾನಗರ ಪಾಲಿಕೆ ಮಾಜಿ ಪೌರರು ಹಾಗೂ ತಾಲೂಕ ಕುರುಬರ ಸಂಘದ ಅಧ್ಯಕ್ಷರಾದ ಯಲ್ಲಪ್ಪ ಕುರಬರ, ಬೆಳಗಾವಿ ಕನಕ ನೌಕರರ ಸಂಘ ನಿವೃತ್ತಿ ಎಸ್.ಪಿ, ಅಶೋಕ ಸದಲಗಿ, ಹಾಲು ಮತ್ತು ಮಹಾಸಭೆಯ ಮಹಿಳಾ ವಿಭಾಗ ರಾಜ್ಯಧ್ಯಕ್ಷರಾದ ರೇಖಾ ದಳವಾಯಿ, ಎಸ್.ಎಲ್.ಅಕ್ಕಿಸಾಗರ ಸೇರಿದಂತೆ ಸಮುದಾಯದ ಮುಖಂಡರು, ಇಲಾಖೆಯ ಅಧಿಕಾರಿಗಳು ಮತ್ತಿತರರು ಪಾಲ್ಗೊಂಡಿದ್ದರು.