ನಗರದ ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿರುವ ಇಬ್ಬರಿಗೆ ಸುಪ್ರೀಂ ಕೋರ್ಟ ಇಂದು ಜಾಮೀನು ಮಂಜೂರು ಮಾಡಿದೆ.
ಇರ್ಪಾನ ನಾಲತವಾಡ ಹಾಗೂ ಸಿಕಂದರ ಎಂಬವರಿಗೆ ಜಾಮೀನು ಮಂಜೂರಾಗಿದೆ.
2022ರ ಏಪ್ರಿಲ್ 17ರಂದು ಒಂದು ಸಮುದಾಯವನ್ನು ಕೆರಳಿಸುವ ರೀತಿಯಲ್ಲಿ ಪೋಸ್ಟ್ ವೈರಲ್ ಮಾಡಲಾಗಿತ್ತು. ಇದನ್ನು ಖಂಡಿಸಿ ಮತ್ತೊಂದು ಕೋಮಿನವರು ಆರೋಪಿಯನ್ನು ತಮ್ಮ ಕೈಗೆ ಒಪ್ಪಿಸುವಂತೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು. ಆಗ ಪರಸ್ಥಿತಿ ವಿಕೋಪಕ್ಕೆ ತಿರುಗಿ ಗಲಭೆಯಾಗಿತ್ತು.
ಪೊಲೀಸ್ ವಾಹನಗಳು ಜಖಂಗೊಂಡ ಹಿನ್ನೆಲೆಯಲ್ಲಿ ಒಟ್ಟು 156 ಜನರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು.ಅಲ್ಲದೇ ಅವರ ಮೇಲೆ ದೇಶದ್ರೋಹದ ಕೇಸ್ ಹಾಕಲಾಗಿತ್ತು. ಈ ಹಿಂದೆ ಎಂಐಎಂನ ಪಾಲಿಕೆ ಸದಸ್ಯ ನಜೀರ ಹೊನ್ಯಾಳ ಸಹಿತ 7 ಮಂದಿಗೆ ಜಾಮೀನು ಮಂಜುರಾಗಿತ್ತು. ಈಗ ಸುಪ್ರೀಂ ಕೋರ್ಟ ತೀರ್ಪಿನಿಂದ ಇಬ್ಬರಿಗೆ ಜಾಮೀನು ದೊರೆತಂತಾಗಿದೆ.
ಅಲ್ಲದೇ ಇತ್ತೀಚೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅಮಾಯಕರು ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದು ಪರಿಶೀಲಿಸಿ ಎಂದು ಬರೆದ ಪತ್ರವು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದನ್ನು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ ಹಲವರು ಆಕ್ಷೇಪವೆತ್ತಿದ್ದರು.
ಬೆಂಗಳೂರಿನ ಕೊತ್ವಾಲ ಎಂಬ ನ್ಯಾಯವಾದಿಗಳು ತಮ್ಮ ಹಿರಿಯ ವಕೀಲರ ಮುಖಾಂತರ ಈ ಇಬ್ಬರ ಪರ ಸುಪ್ರೀಂನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.