ಚಿಕ್ಕೋಡಿ:ರಾಯಬಾಗ ತಾಲೂಕಿನ ಬಾವನಸೌಂದತ್ತಿ ಗ್ರಾಮದ ಯೋಧ ಭೀಮು(ದಿಗ್ವಿಜಯ)ಅಶೋಕ ಭಾಪಕರ (೩೫)ಅವರು ಪಂಜಾಬ್ ನ ಚಂಡಿಗಡದಲ್ಲಿ ಮೃತಪಟ್ಟಿದ್ದು, ನಿನ್ನೆ ರಾತ್ರಿ ಸಮಯದಲ್ಲಿ ಸರಕಾರಿ ಗೌರವಗಳೊಂದಿಗೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು.
ಭಾರತೀಯ ಸೇನಾಪಡೆಯ 67ಎಂಇಡಿ ರೆಜಮೆಂಟ್ ನಲ್ಲಿ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಭೀಮು ಬಾಪಕರ ಅವರು ಸೇನೆ ವತಿಯಿಂದ ಆಯೋಜಿಸಿದ್ದ ಕ್ರಿಡೆಯಲ್ಲಿ ಭಾಗವಹಿಸಿ ಆಟದ ವೇಳೆ ಗಾಯಗೊಂಡಿದ್ದರು. ಅವರನ್ನು ಚಂಡಿಗಡ ಸೇನಾಪಡೆ ಆಸ್ಪತ್ರೆಗೆ ದಾಖಲಿಸಲಾಗಿತ್ತಾದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಇಂದು ಸ್ವಗ್ರಾಮಕ್ಕೆ ಅಂತ್ಯಕ್ರಿಯೆ ಮಾಡಲಾಯಿತು.
ಸ್ವಗ್ರಾಮಕ್ಕೆ ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆ ಯುವಕರು, ಯುವತಿಯರು, ಗ್ರಾಮಸ್ಥರು ಭಾರತ ಮಾತಾ ಕೀ ಜೈ ಎಂದು ಘೋಷಣೆ ಕೂಗಿದರು.
ನಂತರ ಅವರ ಮನೆಯ ಹತ್ತಿರ ಪಾರ್ಥಿವ ಶರೀರ ಹೋಗುತ್ತಿದ್ದಂತೆ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತು. ಪಾರ್ಥಿವ ಶರೀರಕ್ಕೆ ಆರತಿ ಬೆಳಗಿ ಹಾಗೂ ಮಹಿಳೆಯರು ಮೊಂಬತ್ತಿ ಹಚ್ಚಿ ನಮನಗಳನ್ನು ಸಲ್ಲಿಸಿದರು.ನಂತರ ಗ್ರಾಮದ ಸೊಸೈಟಿ ಆವರಣದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಸಹಸ್ರಾರು ಜನರು ಆಗಮಿಸಿ ಯೋಧನ ದರ್ಶನ ಪಡೆದರು. ಸಿಪಿಐ ಎಚ್ ಡಿ ಮುಲ್ಲಾ ಬಿಗಿಬಂದೋಬಸ್ತ್ ಏರ್ಪಾಡು ಮಾಡಿದ್ದರು. ಇನ್ನೂ ಗ್ರಾಮದಲ್ಲಿ ಎಲ್ಲ ಮಹಿಳೆಯರು ಮೆರವಣಿಗೆ ಮಾರ್ಗದಲ್ಲಿ ರಂಗೋಲಿ ಬಿಡಿಸಿ ನಮನ ಸಲ್ಲಿಸಿದರು.
ಭವ್ಯ ಮೇರವಣಿಗೆ
ಯೋಧನ ಪಾರ್ಥಿವ ಶರೀರ ಮೆರವಣಿಗೆ ಮೊದಲು ಭಾರತ ಮಾತಾ ಕಿ ಜೈ ಎಂದು ಗ್ರಾಮಸ್ಥರು ಕೂಗಿದರು. ನಂತರ ತೆರೆದ ವಾಹನದ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯುದ್ದಕ್ಕೂ ಹೂಗಳನ್ನು ಹಾರಿಸುವುದು, ವಂದೇ ಮಾತರಾಂ ಎಂದು ಘೋಷಣೆ ಕೂಗುವ ಮೂಲಕ ಹಾಗೂ ದೇಶ ಭಕ್ತಿಗೀತೆಗಳ ಹಾಡು ಹಾಕುವ ಮೂಲಕ ಯೋಧನಿಗೆ ನಮನ ಸಲ್ಲಿಸಲಾಯಿತು. ನಂತರ ಕೃಷ್ಣಾ ನದಿ ದಡದ ಭಾಗದಲ್ಲಿರುವ ಸ್ಮಶಾನದಲ್ಲಿ ಮರಾಠ ಸಮಾಜದ ಪ್ರಕಾರ ಅಂತ್ಯಕ್ರಿಯೆ ನಡೆಸಲಾಯಿತು.ಮೃತ ಯೋಧನಿಗೆ ಒಂದು ಗಂಡು,ಹೆಣ್ಣು, ಪತ್ನಿ,ತಾಯಿ,ತಂದೆ, ಓರ್ವ ಸಹೋದರ ಇದ್ದಾರೆ.ಮೃತ ಯೋಧ ಭೀಮು ಬಾಪಕರ ಧರ್ಮಪತ್ನಿ ಮೇಘಾ ಇವರಿಗೆ ರಾಷ್ಟ್ರಧ್ವಜವನ್ನು ಅಧಿಕಾರಿಗಳು ಹಸ್ತಾಂತರಿಸಿದರು.
ಬಾವನ ಸೌಂದತ್ತಿ ಗ್ರಾಮವೇ ಸ್ಥಬ್ಧ
ಯೋಧ ನಿಧನ ಸುದ್ದಿ ತಿಳಿದ ತಕ್ಷಣ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಯಿತು. ಅಲ್ಲದೇ ಗ್ರಾಮದಲ್ಲಿ ಅಂಗಡಿ ಮುಂಗಟ್ಟುಗಳು, ಹೊಟೇಲ್ ಗಳು, ಶಾಲಾ ಕಾಲೇಜುಗಳು ಬಂದ್ ಮಾಡಿ ಎಲ್ಲರೂ ಅಂತಿಮ ದರ್ಶನದಲ್ಲಿ ಭಾಗವಹಿಸಿದ್ದರು.
ಸಂಘಟನೆಗಳಿಂದ ಸಹಾಯ
ಯೋಧನ ಮೃತ ಸುದ್ದಿ ತಿಳಿದ ತಕ್ಷಣ ಎಲ್ಲ ಗ್ರಾಮದ ಜನರು ಸೊಸೈಟಿ ಆವರಣದ ಕಡೆ ಬೆಳಿಗ್ಗೆಯಿಂದ ಜನರು ಜಮಾಯಿಸತೊಡಗಿದ್ದರು. ಪಾರ್ಥಿವ ಶರೀರ ಗ್ರಾಮಕ್ಕೆ ಸಂಜೆ ವೇಳೆವರೆಗೂ ಜನರು ಇರುವುದನ್ನುಕಂಡು ಗ್ರಾಮದ ವಿವಿಧ ಸಂಘಟನೆಯವರು ನೀರು, ಟಿ ವ್ಯವಸ್ಥೆ ಮಾಡಿ ಎಲ್ಲರ ಗಮನ ಸೆಳೆದರು.
ಅಂತಿಮ ದರ್ಶನ ಪಡೆದ ಗಣ್ಯರು
ಯೋಧನ ಪಾರ್ಥಿವ ಶರೀರ ಅಂತಿಮ ದರ್ಶನವನ್ನು ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಓಂಕಾರ ಆಶ್ರಮಮಠದ ಶಿವಶಂಕರ ಸ್ವಾಮೀಜಿ, ಈರಗೌಡ ಪಾಟೀಲ, ಗ್ರಾಮಪಂಚಾಯಿತಿ ಅಧ್ಯಕ್ಷ ರಾಮಚಂದ್ರ ಕಾಟೆ, ಉಪಾಧ್ಯಕ್ಷ ಅಜಾದ ತಾಸೀವಾಲೆ, ತಾತ್ಯಾಸಾಹೇಬ್ ಕಾಟೆ, ದೂಳಗೌಡ ಪಾಟೀಲ, ಅನೀಲ ಹಂಜೆ, ಗಣೇಶ ಮೊಹಿತೆ,ಮಹಾವೀರ ಪಾಟೀಲ, ಕಿರಣ ಕಲ್ಲೋಳ್ಕರ,ಅಜಿತ ಖೇಮಲಾಪುರೆ,ಅಭಿವೃದ್ಧಿ ಅಧಿಕಾರಿ ಎಸ್ ಎಸ್ ನ್ಯಾಮಗೌಡ ಗ್ರಾಮ ಲೆಕ್ಕಾಧಿಕಾರಿ ನಾಗರಾಜ ಪತ್ತಾರಸೇರಿದಂತೆ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಗ್ರಾಮಸ್ಥರು ಪಡೆದರು.
ಜನರಿಗೆ ಧನ್ಯವಾದ ಅರ್ಪಿಸಿದ ಗ್ರಾಪಂ ಅಧ್ಯಕ್ಷ ರಾಮಚಂದ್ರ ಕಾಟೆ
ಯೋಧನ ಅಂತ್ಯಕ್ರಿಯೆಯಲ್ಲಿ ಅಹಿತಕರ ಘಟನೆ ಆಗದಂತೆ ಸಹಕರಿಸಿದ್ದಕ್ಕೆ ಎಲ್ಲರಿಗೂ ಧನ್ಯವಾಗಳು ಎಂದು ಗ್ರಾಮಪಂಚಾಯಿತಿ ಅಧ್ಯಕ್ಷ ರಾಮಚಂದ್ರ ಕಾಟೆ ಹೇಳಿದರು. ಪೊಲೀಸ್ ಸಿಬ್ಬಂಧಿಗಳ ಪಾತ್ರ ಬಹಳ ಮುಖ್ಯವಾಗಿತ್ತು. ಕಾರಣ ಸಹಸ್ರಾರು ಸಂಖ್ಯೆಯಲ್ಲಿ ಜನರನ್ನು ನಿಯಂತ್ರಿಸಿದ್ದಾರೆ. ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದ್ದಲ್ಲದೇ, ವಿವಿಧ ಇಲಾಖೆ ಅಧಿಕಾರಿಗಳೂ ಸಹಿತ ಭಾಗವಹಿಸಿದ್ದರು. ಇನ್ನೂ ಗ್ರಾಮದ ಗ್ರಾಮಪಂಚಾಯಿತಿ ಸದಸ್ಯರು, ಮುಖಂಡರುಗಳು, ಸಂಘಟನೆಗಳು, ಆಶಾ, ಅಂಗನವಾಡಿ ಕಾರ್ಯಕರ್ತರಿಗೆ ಮತ್ತು ಹೆಸ್ಕಾಂ ಇಲಾಖೆ ಅಧಿಕಾರಿಗಳೂ ಕಾರ್ಯನಿರ್ವಹಿಸಿದ್ದಾರೆ. ಎಲ್ಲರಿಗೂ ಧನ್ಯವಾದಗಳು.
ಒಟ್ಟಿನಲ್ಲಿ ಮೃತ ಯೋಧ ಭೀಮು ಭಾಪಕರ ಸಾವಿಗೆ ಇಡೀ ಬಾವನ ಸೌಂದತ್ತಿ ಗ್ರಾಮವೆ ಸ್ಥಬ್ಧವಾಗಿತ್ತು.ದುಖದ ಮಡುವಿನಲ್ಲಿ ತೆಲಾಡಿದ ಗ್ರಾಮಸ್ಥರು ಮೃತ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.
ಡಿ.ಕೆ.ಉಪ್ಪಾರ ಇನ್ ನ್ಯೂಸ್ ಚಿಕ್ಕೋಡಿ